Showing posts with label ಮಾ ನಿಷಾಧ ಕನ್ನಡ ಕವನ ವಿದ್ಯಾಶಂಕರ್ ಹರಪನಹಳ್ಳಿ. Show all posts
Showing posts with label ಮಾ ನಿಷಾಧ ಕನ್ನಡ ಕವನ ವಿದ್ಯಾಶಂಕರ್ ಹರಪನಹಳ್ಳಿ. Show all posts

Wednesday, October 22, 2008

ಮಾ ನಿಷಾಧ

ಮಾ ನಿಷಾಧ!

ಆಗ ನನಗಿನ್ನೂ ಹದಿನಾರು
ಅವ ಸಿಕ್ಕಿದ, ಕಣ್ಣಲ್ಲೇ ಮಾತು ನೂರಾರು
ನಕ್ಷತ್ರಗಳ ಕಿತ್ತು ಮುಡಿ ಮುಡಿಸುವ ಮಾತೇನು!
ಆ ಆವೇಶ, ಪುಳಕ, ಆದರ್ಶ
ಆ ಬೆರಗು, ಆ ಮಧುರ ಅನುಭೂತಿ, ಆ ಸೊಬಗು,
ಹೊಯ್! ನನಗೆ ಸಿಕ್ಕೆಬಿಟ್ಟ ನನ್ನ ರಾಜಕುಮಾರ!

ಇನ್ನೇನು ಉಳಿಯಲಿಲ್ಲ ಬದುಕಿನಲಿ ಅನಂತ ಸಂತೋಷದ ವಿನಃ
ಧನ್ಯೋಸ್ಮಿ! ಧನ್ಯೋಸ್ಮಿ!!


ಅದೃಷ್ಟವೋ ದುರಾದೃಷ್ಟವೋ ಆಗಿಹೋಯಿತು
ನನ್ನ ಮದುವೆ ಅವನ ಜೊತೆ
ಎಲ್ಲ ಸಂಭ್ರಮಕ್ಕೂ ಒಂದು ಕೊನೆಯುಂಟು?!
ಅನಂತ ಪುನಾರವರ್ತನೆಯ ಬದುಕು
ಮಕ್ಕಳು, ಅವರ ಓದು, ಮದುವೆ
ಅಸ್ತಿ ಲೆಕ್ಕಚಾರ, ಅವರ ಪ್ರಮೋಷನ್...
ಅವ ದುಡಿತದಲಿ, ಬದುಕಿನ ಓಟದಲಿ ಹಣ್ಣಾದ
ಜೊತೆಗೆ ಬಿಪಿ, ಡೈಯಬಿಟಿಸ್ ಮತ್ತು ನನ್ನ ಮೆನೋಪಾಸ್...

ಈಗ ಹಕ್ಕಿಗಳೆಲ್ಲ ಹಾರಿಹೋಗಿ
ಗೂಡಿನಲಿ ನಾವಿಬ್ಬರುಳಿದು ಕಣ್ತೆರೆದು ನೋಡಿದರೆ
ಅವ ಪಿಂಚಿಣಿಗಾಗಿ ಕಾಯುವ ಮುದುಕ
ನಾ ತರಕಾರಿ ಬೆಲೆ ಹೆಚ್ಚಾಯಿತೆಂದು ವಟಗುಟ್ಟುವ ಮುದುಕಿ...


[ಈಗ ಕಡಿಮೆ ನಿದ್ರೆಗಳ ರಾತ್ರಿಗಳಲಿ
ಹುಡುಕುತ್ತೇನೆ ಆ ಹುಣ್ಣಿಮೆ, ನಕ್ಷತ್ರ, ನನ್ನ ರಾಜಕುಮಾರನ
ಬಹುಶಃ ಮತ್ತೊಂದು ಮೊಗ್ಗಲಲ್ಲಿ
ಅವ ಹುಡುಕುತ್ತಿರಬಹುದು ತನ್ನ ಯೌವನವ, ರಾಜಕುಮಾರಿಯ...]

ಕಾಲನೆಂಬ ಬೇಟೆಗಾರಗೆ ಎಲ್ಲಾ ಬಲಿ
ನನ್ನಲಿ ಮಡುಗಟ್ಟಿದ ವಿಷಾದ... ಮಾ ನಿಷಾಧ!